ಬೆಂಗಳೂರು ಗ್ರಾಮಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದಾಗಿ ವಿಶ್ವದ ವಿಮಾನಸಾರಿಗೆ ಸಾಗಾಣಿಕೆಯ ನಕ್ಷೆಯಲ್ಲಿ ಮೂಡಿಬಂದಿದೆ. ೨೦೦೮ ರ ಮೇ ೨೩ ರಂದು ಕರ್ನಾಟಕ ರಾಜ್ಯದ ಪ್ರಪ್ರಥಮ ಅಂತಾ-ರಾಷ್ಟ್ರೀಯ ವಿಮಾನನಿಲ್ದಾಣ' ದ ಉದ್ಘಾಟನೆಯಾಯಿತು. ಬೆಂಗಳೂರು ನಗರದಿಂದ ಸುಮಾರು ೩೨ ಕಿ. ಮೀ ದೂರದಲ್ಲಿರುವ ಈ ಸಾರಿಗೆ ವಿಮಾನ ನಿಲ್ದಾಣಕ್ಕೆ ಸಂಪರ್ಕರಸ್ತೆಗಳು ಸರಿಯಾಗಿವೆ. 'ಎಕ್ಸ್ಪ್ರೆಸ್ ವೇ' ಮತ್ತು 'ಹೈಸ್ಪೀಡ್ ರೈಲ್ವೆ' ಲೈನಿನ ಯೋಜನೆಯ 'ನೀಲನಕ್ಷೆ' ತಯಾರಾಗಿದೆ. ಟ್ಯಾಕ್ಸಿ ಸೇವೆ, ಮತ್ತು ಕೆ. ಎಸ್. ಆರ್. ಟಿ. ಸಿ ಹವಾನಿಯಂತ್ರಿತ ಬಸ್ ಗಳು ಪ್ರತಿ ೧೫ ನಿಮಿಷಕ್ಕೆ ಒಂದರಂತೆ ಸಂಚಾರಕ್ಕೆ ವ್ಯವಸ್ಥೆಮಾಡಲಾಗಿದೆ. ಬೆಂಗಳೂರಿನ ಯಾವಮೂಲೆಯಿಂದಲಾದರೂ ಹೊರಟು ವಿಮಾನನಿಲ್ದಾಣವನ್ನು ಸುಮಾರು ಒಂದರಿಂದ ಒಂದೂವರೆ ಗಂಟೆಗಳಲ್ಲಿ ತಲುಪುವ ವ್ಯವಸ್ಥೆ ಗಮನಾರ್ಹವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 'ಬಿ ಐ ಎ ಎಲ್ ಸಹಾಯವಾಣಿ' ಯ ಸೌಲಬ್ಯವಿದೆ. ವಿಮಾನನಿಲ್ದಾಣಕ್ಕೆ ಸಂಪರ್ಕಮಾರ್ಗ, ಸಾರಿಗೆ ಸೌಲಬ್ಯಗಳ ವಿವರಗಳು, ಮತ್ತು ಸಾಮಾನ್ಯ ಮಾಹಿತಿಗಳನ್ನು ದೂರವಾಣಿಯ ಮೂಲಕ ಕೂಡಲೆ ಪಡೆಯಬಹುದು. ಸಹಾಯವಾಣಿ ಸಂಖ್ಯೆ : ೪೦೫೮೧೧೧೧. ವಿಮಾನವೇರುವ ಮೊದಲು ನಡೆಸುವ 'ಭದ್ರತಾ ತಪಾಸಣೆಯ ವಿಧಿ' ಯಲ್ಲಿ ಪ್ರಯಾಣಿಕರು 'ಹಲವು ಕ್ಯೂ' ಗಳಲ್ಲಿ ಕಾದು ಮುಂದುವರೆಯುವ ಬದಲು, 'ಒಂದೇಹಂತದ ತಪಾಸಣಾ ವ್ಯವಸ್ಥೆ' ಯನ್ನು ನಿರೂಪಿಸಲಾಗಿದೆ. ೫೩ 'ಚೆಕ್-ಇನ್ ಕೌಂಟರ್' ಗಳು, ಹಾಗೂ ೧೮ 'ಸ್ವಯಂ ತಪಾಸಣಾಯಂತ್ರ' ಗಳನ್ನು ಸ್ಥಾಪಿಸಲಾಗಿದೆ. ಮಕ್ಕಳ ಉಪಚಾರ ಹಾಗೂ ಆರೋಗ್ಯ-ಸೇವೆಗೆ (ಔಷಧಾಲಯ, ಡಯಾಪರ್ ಬದಲಾವಣೆ, ಹಾಲುಕುಡಿಸುವಿಕೆ ಇತ್ಯಾದಿಗಳಿಗೆ) ಪ್ರತ್ಯೇಕ ಜಾಗವಿದೆ.